-ಎಚ್.ಎಸ್.ವೆಂಕಟೇಶ ಮೂರ್ತಿ
ಹಿಂಸೆಯಿಂದ ಜಗತ್ತು ತಲ್ಲಣಿಸುತ್ತಿರುವ ಕಾಲವಿದು. ಧಾರ್ಮಿಕ ಅಸಹಿಷ್ಣುತೆ; ಕೋಮು ದ್ವೇಶದ ದಳ್ಳುರಿ; ಜನಾಂಗೀಯಸಂಘರ್ಷ; ಭಯೋತ್ಪಾದಕ ಉಗ್ರಗಾಮಿಗಳ ಹತ್ಯಾಕಾಂಡಗಳು; ನಕ್ಸಲರ ರಕ್ತಮಾರ್ಗ, ತಣಿವಿಲ್ಲದ ಯುದ್ಧಮಾರಿಯ ರಕ್ತತೃಷ್ಣೆ-ಇವು ಸಾಮೂಹಿಕ ಪ್ರವೃತ್ತಿ. ಇದೆಲ್ಲದರ ತಳಪರಿಗೆ ಮನುಷ್ಯನ ವಿಕ್ಷಿಪ್ತ ಮನಸ್ಸು. ಸದಾ ನುಗ್ಗಿನುಗ್ಗಿ ಅಂತರಂಗದ ತಿಳಿಯನ್ನು ಬಗ್ಗಡ ಮಾಡುವ ನೇತ್ಯಾತ್ಮಕ ವಿಚಾರಗಳು. ಅಧಿಕಾರದ ಹಪಾಹಪಿ; ನೈತಿಕ ಅದಃಪತನ; ಎಣೆಯಿಲ್ಲದ ಭೋಗಲಾಲಸೆ; ಎಷ್ಟು ತಿಂದರೂ ಸಾಲದು ಎಂಬ ಹೊಟ್ಟೆಬಾಕತನ; ನಾನಾಯಿತು ಮೂರುಲೋಕವಾಯಿತು ಎಂಬ ಸ್ವಾರ್ಥಪಾರಾಯಣತತ್ಪರತೆ. ನಾನು ಬದುಕುವುದು ನನಗಾಗಿ ಮಾತ್ರ ಎಂಬ ಸ್ವಕೇಂದ್ರಿತ ನಿಲುವು. ಮುಂದಿನ ಪೀಳಿಗೆಯ ಬಗ್ಗೆ ಯತ್ಕಿಂಚಿತ್ ಕಾಳಜಿಯಿಲ್ಲದೆ, ಇರುವ ಒಂದೇ ಭೂಮಿಯನ್ನು ನಿರಂತರವಾಗಿ ಹಾಳುಗೆಡಹುತ್ತಿರುವ ಉಚ್ಛೃಂಖಲ ಪ್ರವೃತ್ತಿ. ಹೀಗೆ ಒಲೆ ಮತ್ತು ಧರೆ ಎರಡೂ ಹತ್ತಿ ಉರಿಯುತ್ತಿವೆ. ಸೂಕ್ಷ್ಮ ಸಂವೇದಿಗಳನ್ನು ಕ್ಷೋಭೆಗೊಳಿಸುತ್ತಿರುವ ಸಂಗತಿಯಿದು. ಜಗತ್ತಿನಲ್ಲಿ ಎಲ್ಲೋ ಸಂಭವಿಸುವ ದುರ್ಘಟನೆ ನಾವು ಮಲಗಿದ ಮಂಚವನ್ನು ಆ ಕ್ಷಣದಲ್ಲೇ ಅಲ್ಲಾಡಿಸುವ ಸಂದರ್ಭವಿದು.(ಜೈನ ಪುರಾಣಗಳಲ್ಲಿ ತೀರ್ಥಂಕರರ ಜನನವಾದಾಗ ಇಂದ್ರನ ಆಸನ ಕಂಪವಾಗುವುದು ನೆನಪಾಗುತ್ತಿದೆ). ಇಡೀ ಜಗತ್ತೇ ಈಗ ಮನುವಿನ ತೆಪ್ಪವೋ, ನೋಹನ ದೋಣಿಯೋ ಆಗಿರುವುದರಿಂದ , ಅದು ಮುಳುಗಹತ್ತಿತು ಅಂದರೆ ರಕ್ಷಣೆಗೆ ಬೇರೊಂದು ಪಾತಳಿಯೇ ಇಲ್ಲ. ಅದಕ್ಕೇ ಸಮಾಜಶಾಸ್ತ್ರದಂತೆ ಒಂದು ಬುಡಕಟ್ಟನ್ನು ಮೂಲಘಟಕವಾಗಿ ಮಾಡಿಕೊಂಡು ಈಗ ಚಿಂತಿಸುವಂತಿಲ್ಲ; ರಾಜಕೀಯ ವಿಜ್ಞಾನದಂತೆ ಒಂದು ದೇಶವನ್ನು ಮೂಲಭೂತ ಘಟಕವಾಗಿ ಹಿಡಿದು ಇಂದು ಯೋಚಿಸುವಂತಿಲ್ಲ. ಅದಕ್ಕೇ ಹದಿನಾಕು ಲೋಕಗಳನ್ನೂ ಒಪ್ಪಿಡಿಯಲ್ಲಿ ಹಿಡಿದು ಮಾತಾಡುವ ಪುರಾಣಪರಿಪ್ರೇಕ್ಷ್ಯ ಈವತ್ತಿನ ಅಗತ್ಯವೆನಿಸುತ್ತಿದೆ. ಹಿರಣ್ಯಾಕ್ಷನು(ರಾವಣನಂತೆ ಕೇವಲ ಅಯೋಧ್ಯೆಯ ಸೀತೆಯನ್ನಲ್ಲ) ಇಡೀ ಭೂಮಂಡಲವನ್ನೇ ಅಪಹರಿಸಿ ಖಾಸಗೀ ಆಸ್ತಿಮಾಡಿಕೊಳ್ಳಲು ಹೊಂಚುಹಾಕುತ್ತಾನೆ. ಆಧುನಿಕ ಪರಿಭಾಷೆಯಲ್ಲಿ ಇದು ಹಿಟ್ಲರ್ ಪ್ರವೃತ್ತಿ. ಈ ಆಕ್ರಮಣ ಭೌತಿಕ ಮತ್ತು ಆಂತರಂಗಿಕ ಎರಡೂ ನೆಲೆಯಲ್ಲಿ ನಡೆಯುತ್ತದೆ ಎನ್ನುವುದನ್ನು ಮಾನ್ಯ ಮಾಡುವುದಾದರೆ ಜಗತ್ತನ್ನೇ ಆಪೋಷನ ಮಾಡಲಿಕ್ಕೆ ಹೊರಟಿರುವ ಅಮೆರಿಕಾ (ರೂಪಕ ಭಾಷೆಯಲ್ಲಿ ಅಗಸ್ತ್ಯ)ನಮ್ಮ ಕಣ್ಣ ಮುಂದೆ ನಿಲ್ಲುತ್ತದೆ. ನಾವು ಇಡೀ ವಿಶ್ವವನ್ನೇ ಇಸ್ಲಾಮಿಕರಣ ಮಾಡಲು ಬಯಸುತ್ತೇವೆಯೋ? ಇಡೀ ವಿಶ್ವವನ್ನೇ ಕ್ರಿಸ್ತೀಕರಣ ಮಾಡಲು ಹೊರಡುತ್ತೇವೆಯೋ? ಇಡೀ ಭಾರತವನ್ನೇ ಹಿಂದೂಕರಣ ಮಾಡಲು ಹೊರಡುತ್ತೇವೆಯೋ? ಇವೆಲ್ಲವೂ ಹಿರಣ್ಯಾಕ್ಷಪ್ರವೃತ್ತಿಯೇ. ನಮ್ಮ ರೂಪಕ ಜಗತ್ತು ವಿಶ್ವಾತ್ಮಕವಾಗಬೇಕಾದರೆ ಯಾವ ಮಾರ್ಗ ನಮಗೆ ಅಗತ್ಯವಾದೀತು ಎಂಬುದನ್ನು ನಾವು ಈವತ್ತು ಪರಿಶೀಲಿಸಬೇಕಾಗಿದೆ. ಮನುಷ್ಯನ ಮನಸ್ಸು ಮತ್ತು ಅದು ಚಿನ್ನಾಟವಾಡುತ್ತಿರುವ ಜಗನ್ಪಾತಳಿಯನ್ನು ಅಂಗೈಗ್ರಾಹ್ಯ ಮಾಡಿಕೊಂಡು ನಾವು ವ್ಯವಹರಿಸಬೇಕಾದ ಅಗತ್ಯ ಇಂದು ಉಂಟಾಗಿದೆ. ಅದಕ್ಕೆ ತಕ್ಕ ರೂಪಕ ಜಗತ್ತನ್ನೂ ಕಲಾಕಾರ ಈವತ್ತು ಶೋಧಿಸಿಕೊಳ್ಳಬೇಕಾಗಿದೆ.
ಭೂವ್ಯೋಮವ್ಯಾಪಿಯಾಗಿರುವ ಈ ಕಬಂಧಪ್ರವೃತ್ತಿಯನ್ನು ಎದುರಿಸಲು ಏಸು, ಬುದ್ಧ, ರಾಮ, ಕೃಷ್ಣ, ಗಾಂಧಿಯಂಥ ಮಹಾನ್ ಚೇತನಗಳು ಕೆಲವು ತಾತ್ವಿಕ ಮಾದರಿಗಳನ್ನು ನಮ್ಮ ಕಣ್ಮುಂದೆ ಇರಿಸಿ ಹೋಗಿದ್ದಾರೆ. ಇವುಗಳಲ್ಲಿ ಯಾವ ತಾತ್ವಿಕ ಮಾದರಿ ಎಷ್ಟರಮಟ್ಟಿಗೆ ನಮಗೆ ಅಗತ್ಯವಾದೀತು? ಉಪಯುಕ್ತವಾದೀತು? ಹಾಗೆ ಉಪಯುಕ್ತವಾಗಲು ಆ ಚಿಂತನೆಗಳನ್ನು ಮತ್ತೆ ರೂಢಿಸುವ ತುರ್ತು ಅಗತ್ಯ ಈಗ ಕಾಣುತ್ತಿಲ್ಲವೇ? ಕಲೆಯಲ್ಲಿ ಈ ಮಹಾನ್ ತಾತ್ವಿಕತೆಯನ್ನು ಅನುಭವಗತ ಮಾಡಿಕೊಳ್ಳುವ ಬಗೆಯೆಂತು?ಯಾವ ಪಾಕವನ್ನು ನಾವು ನಮ್ಮ ನಮ್ಮ ಮಾಧ್ಯಮಗಳಲ್ಲಿ ಸಾಧಿಸಬೇಕಾಗಿದೆ? ಅಥವಾ ಯಾವ ಹೊಸ ತಾತ್ವಿಕತೆಯನ್ನು ಜಗತ್ತು ತನ್ನ ಆತ್ಮರಕ್ಷಣೆಗಾಗಿ ಈವತ್ತು ಹಂಬಲಿಸಹತ್ತಿದೆ? ಇದು ನನ್ನ ಮನಸ್ಸನ್ನೂ ಈಗ ತೀವ್ರವಾಗಿ ಕಾಡುತ್ತಿರುವ ಸಂಗತಿಯಾಗಿದೆ. ಈವತ್ತಿನ ಎಲ್ಲ ಕಲಾಕಾರರು ತಮ್ಮ ತಮ್ಮ ಮಾಧ್ಯಮಗಳ ಮೂಲಕ ಈ ವಿಶ್ವಾತ್ಮಕ ಚಿಂತನೆಯಲ್ಲಿ ತಮ್ಮ ತಮ್ಮ ಪರಿಮಿತಿಯಲ್ಲಿ ಗಂಭೀರವಾಗಿ ತೊಡಗಿಕೊಳ್ಳದೆ ಗತ್ಯಂತರವಿಲ್ಲ. ರಾಮ, ಕೃಷ್ಣ, ಬುದ್ಧನ ಕುರಿತ ನನ್ನ ಮತ್ತೆ ಮತ್ತೆ ಮರುಕಳಿಸುವ ಧ್ಯಾನಕ್ಕೆ ಈ ತೊಡಗುವಿಕೆಯೇ ಕಾರಣವೆನ್ನಬಹುದು.





